![]() |
| ರಣವೀರ್ ಬ್ರಾರ್ |
ಸೆಲೆಬ್ರಿಟಿ ಶೆಫ್ ಎನಿಸಿಕೊಂಡಿರುವ ರಣವೀರ್ ಝೀ ವಾಹಿನಿಯಲ್ಲಿ ‘ಝೀ ಖಾನಾ ಖಜಾನಾ’ ಕಾರ್ಯಕ್ರಮ ನಡೆಸಿಕೊಡುತ್ತಾರೆ. ಈ ಕಾರ್ಯಕ್ರಮದ ಸಹಯೋಗದೊಂದಿಗೆ ಇತ್ತೀಚೆಗೆ ವೈಟ್ಫೀಲ್ಡ್ನಲ್ಲಿರುವ ಇನ್ಆರ್ಬಿಟ್ ಮಾಲ್ ಏರ್ಪಡಿಸಿದ್ದ ‘ಇನ್ಆರ್ಬಿಟ್ ಕಿಚನ್ ಮೆಗಾಸ್ಟಾರ್' ಎಂಬ ಅಡುಗೆ ಸ್ಪರ್ಧೆಯ ನಿರ್ಣಾಯಕರಾಗಿ ಆಗಮಿಸಿದ್ದ ಅವರು ‘ಮೆಟ್ರೊ’ದೊಂದಿಗೆ ತಮ್ಮ ವೃತ್ತಿ ಬದುಕಿನ ಅನುಭವ ಹಂಚಿಕೊಂಡರು...
ನಿಮ್ಮ ಕೌಟುಂಬಿಕ ಹಿನ್ನೆಲೆ, ಶಿಕ್ಷಣ ಕುರಿತು ಹೇಳಿ?
ನನ್ನದು ಹರಿಯಾಣದ ದೊಡ್ಡ ಜಮೀನ್ದಾರಿ ಕುಟುಂಬ. ನನ್ನ ಅಪ್ಪ–ಅಮ್ಮ ಕೂಡ ನಾನು ಎಲ್ಲ ಮಕ್ಕಳಂತೆ ಓದಿ ಪ್ರತಿಷ್ಠಿತ ಕೆಲಸ ಪಡೆಯಬೇಕು ಎಂದು ಕನಸು ಕಂಡವರು. ಆದರೆ ನನಗೆ ಎಳವೆಯಲ್ಲೇ ಅಡುಗೆಮನೆಯತ್ತ ಆಕರ್ಷಣೆ ಶುರುವಾಯಿತು. ಊಟಕ್ಕೆ ಕುಳಿತಾಗ ಎಲ್ಲರೂ ತಿನ್ನುವುದರತ್ತಲೇ ದೃಷ್ಟಿ ನೆಟ್ಟರೆ, ನಾನು ಮಾತ್ರ ಪ್ರತಿ ತಿನಿಸನ್ನು ಕುತೂಹಲದಿಂದ ಗಮನಿಸುತ್ತಿದ್ದೆ. ಅದಕ್ಕಾಗಿ ಮನೆಯಲ್ಲಿ ನನ್ನನ್ನು ಎಲ್ಲರೂ ಅಪಹಾಸ್ಯ ಮಾಡುತ್ತಿದ್ದರು. ಅಡುಗೆ ಮಾಡುವುದು ಅಯೋಗ್ಯರ ಕೆಲಸವೆಂದೇ ಅವರ ಭಾವನೆ. ನನ್ನ ಭಾವನೆಗಳಿಗೆ ಬೆಲೆ ಸಿಗದಾದಾಗ ನಾನು ಮನೆ ಬಿಟ್ಟು ಲಕ್ನೋಗೆ ಓಡಿ ಹೋದೆ. ನನಗಾಗ 16 ವರ್ಷ ವಯಸ್ಸು. ಅಲ್ಲಿ ಬೀದಿ ಬದಿಯಲ್ಲಿ ಕಬಾಬ್ ಮಾರುತ್ತಿದ್ದ ಮುನೀರ್ ಅಹಮದ್ ಎಂಬಾತನ ಸ್ನೇಹ ಸಂಪಾದಿಸಿದೆ.
ಕಬಾಬ್ ಉಸ್ತಾದ್ ಎಂದೇ ಖ್ಯಾತರಾಗಿದ್ದ ಮುನೀರ್ ಅವರ ಕುಟುಂಬ ನವಾಬರ ಕಾಲದಿಂದಲೂ ಕಬಾಬ್ ತಯಾರಿಯಲ್ಲಿ ಪ್ರಸಿದ್ಧವಾದದ್ದು. ಮುನೀರ್ ನನಗೆ ಪಾಕ ಕಲೆಗಳನ್ನು ಕಲಿಸಿದ ಮೊದಲ ಗುರು ಎಂದರೆ ತಪ್ಪಾಗಲಾರದು. ನಾನು ಅವರಲ್ಲಿ ಕಬಾಬ್ ತಯಾರಿಕೆಯ ಎಲ್ಲ ರಹಸ್ಯಗಳನ್ನು ಯಾರಿಗೂ ಗೊತ್ತಾಗದಂತೆ ಕಲಿತಿದ್ದೆ. ಅದಾಗಲೇ ಸುಮಾರು ಎಂಟು ತಿಂಗಳು ಸಂದಿತು. ಒಂದು ದಿನ ನಮ್ಮ ಕುಟುಂಬದ ಸ್ನೇಹಿತರೊಬ್ಬರ ಕಣ್ಣಿಗೆ ಬಿದ್ದೆ. ಅವರು ಮನೆಗೆ ವಿಷಯ ತಿಳಿಸಿದ್ದರು. ಮುಂದೊಂದು ದಿನ ಅಪ್ಪ-–ಅಮ್ಮ ನನ್ನ ಮುಂದೆ ಬಂದು ನಿಂತಾಗ ನನ್ನ ಹಟವೇ ಗೆದ್ದಿತ್ತು.
ನಂತರ ನಾನು ಲಕ್ನೋದ ಪ್ರತಿಷ್ಠಿತ ಹೋಟೆಲ್ ಮ್ಯಾನೇಜ್ಮೆಂಟ್ ಸಂಸ್ಥೆಯತ್ತ ಹೆಜ್ಜೆ ಹಾಕಿದೆ. ಅದಾದ ಮೇಲೆ ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಪ್ರಯಾಣ ಬೆಳೆಸಿದೆ. ಕಲಿಕೆಯ ನಂತರ ದೆಹಲಿಯ ತಾಜ್ ಹೋಟೆಲ್ ಸೇರಿದೆ. ಅಲ್ಲಿಂದ ನನಗೆ ಅವಕಾಶದ ಬಾಗಿಲುಗಳು ತೆರೆದವು. ಪ್ರಾರಂಭದಲ್ಲಿ ನನ್ನ ಅಡುಗೆ ಹುಚ್ಚು ಕಂಡು ‘ಬಾಸ್ಟರ್ಡ್’ ಎಂದಿದ್ದ ಅಮ್ಮ ಈಗ ಬಾಸ್ಟನ್ವರೆಗಿನ ನನ್ನ ಪಯಣ ಕಂಡು ಹೆಮ್ಮೆಪಡುತ್ತಾರೆ. ಅಂದು ಮೂಗುಮುರಿದವರೇ, ಇಂದು ಮೂಗಿನ ಮೇಲೆ ಬೆರಳಿಟ್ಟು ಬೆರಗಾಗಿ ನೋಡುವಂತೆ ಬೆಳೆದಿರುವೆ.
‘ಅಡುಗೆ’ಯನ್ನು ನೀವು ಹೇಗೆ ವ್ಯಾಖ್ಯಾನಿಸುತ್ತೀರಿ?
ವಿನಮ್ರತೆಯೊಂದಿಗೆ ಕ್ರಿಯಾಶೀಲತೆ ಮೇಳೈಸಿ ಹೃದಯಪೂರ್ವಕವಾಗಿ ಮಾಡುವ ರಸಸಿದ್ಧಿ, ಕಲೆ.
ಈ ವೃತ್ತಿ ಆಯ್ದುಕೊಳ್ಳಬಯಸುವವರಿಗೆ ನಿಮ್ಮ ಕಿವಿಮಾತೇನು?
ಬಾಣಸಿಗ ವೃತ್ತಿ ಎನ್ನುವುದು ಇತರೆ ವೃತ್ತಿಗಳಂತಲ್ಲ. ಅದು ತುಂಬಾ ವಿನಯವನ್ನು ಬಯಸುತ್ತದೆ. ಅದಿಲ್ಲದ ಹೊರತು ಓರ್ವ ಯಶಸ್ವಿ ಬಾಣಸಿಗ ಎನಿಸಿಕೊಳ್ಳಲಾರ. ಇದು ನಾನು ಕಂಡುಕೊಂಡ ಸತ್ಯ. ಗ್ರಾಹಕರ ಅಗತ್ಯಗಳ ಅರಿತು ಅದಕ್ಕೆ ನಮ್ರತೆ ತೋರಿ ಹೃದಯಪೂರ್ವಕವಾಗಿ ತಯಾರಿಸುವ ಅಡುಗೆ ಉತ್ಕೃಷ್ಟವಾಗಿರುತ್ತದೆ. ಜತೆಗೆ ಶೀಘ್ರವಾಗಿ ತಯಾರಿಸುವ ತಿನಿಸುಗಳತ್ತ ಗಮನಹರಿಸಬೇಕು.
ಯುವ ಜನತೆಯ ಆಹಾರ ಶೈಲಿಯಲ್ಲಿ ನೀವು ಕಂಡುಕೊಂಡ ಪ್ರಮುಖ ಬದಲಾವಣೆ ಏನು?
ಪಾಶ್ಚಾತ್ಯ ಪ್ರಭಾವದಿಂದಾಗಿ ಯುವ ಜನರು ಚಿಕ್ಕ ಚಿಕ್ಕ ತಿನಿಸುಗಳತ್ತ ವಾಲುತ್ತಿದ್ದಾರೆ. ಹೀಗಾಗಿ ದೇಶದ ಪ್ರಮುಖ ನಗರಗಳಲ್ಲಿ ಇಂದು ಹಲವಾರು ದೇಶಗಳ ರುಚಿ ಉಣಬಡಿಸುವ ಹೋಟೆಲ್ಗಳು ತಲೆಯೆತ್ತುತಿರುವುದನ್ನು ಕಾಣಬಹುದು. ಅದೇ ರೀತಿ ನಾನು ಕೂಡ ಬಾಸ್ಟನ್ ರೆಸ್ಟೋರೆಂಟ್ನಲ್ಲಿ ವಿವಿಧ ದೇಶಗಳ ಮಸಾಲೆ ಪದಾರ್ಥಗಳನ್ನು ಬೆರೆಸಿ ನನ್ನದೇ ಆದ ವಿಶಿಷ್ಟ ಖಾದ್ಯಗಳನ್ನು ತಯಾರಿಸುತ್ತಿರುತ್ತೇನೆ.
ಭವಿಷ್ಯದ ಯೋಜನೆಗಳೇನು?
ನನ್ನದೇ ಆದ ‘ಫುಡ್ ಸ್ಟುಡಿಯೋ’ ರೂಪಿಸಬೇಕೆಂಬ ಕನಸಿದೆ. ಅದರಲ್ಲಿ ನನ್ನ ಕಲ್ಪನೆಯಲ್ಲಿ ಅರಳುವ ಅಡುಗೆ ಕಲೆಗಳನ್ನು ಪರಿಚಯಿಸಬೇಕೆಂಬ ತುಡಿತವಿದೆ.
ಬಿಡುವಿನ ವೇಳೆಯ ಹವ್ಯಾಸಗಳೇನು?
ಈ ವೃತ್ತಿಯ ಹೊರತಾಗಿ ಬಿಡುವಿನ ವೇಳೆಯಲ್ಲಿ ಪೇಂಟಿಂಗ್ ಮಾಡುವುದು ನನಗೆ ಅಚ್ಚುಮೆಚ್ಚಿನ ಹವ್ಯಾಸ. ನನ್ನ ಹಲವು ಕಲಾಕೃತಿಗಳು ಬಾಸ್ಟನ್ನ ರೆಸ್ಟೋರೆಂಟ್ಗಳ ಗೋಡೆಗಳನ್ನು ಅಲಂಕರಿಸಿವೆ.
ಬೆಂಗಳೂರು ಕುರಿತು ಹೇಳಿ?
ಬೆಂಗಳೂರಿನಲ್ಲಿ ನನ್ನ ಸಹೋದರಿ ನೆಲೆಸಿದ್ದಾಳೆ. ನನ್ನ ಸೋದರ ಸಂಬಂಧಿಯೊಬ್ಬ ಇಲ್ಲೇ ಓದುತ್ತಿದ್ದಾನೆ. ಹೀಗಾಗಿ ನಾನು ಆಗಾಗ ಇಲ್ಲಿಗೆ ಭೇಟಿ ನೀಡುತ್ತೇನೆ. ಇದು ನನಗೆ ಎರಡನೆಯ ಮನೆ ಇದ್ದಂತೆ. ನಾನು ಇಷ್ಟಪಡುವ ಮೆಟ್ರೊ ಪಾಲಿಟನ್ ನಗರಗಳಲ್ಲಿ ಬೆಂಗಳೂರಿಗೆ ಮೊದಲ ಆದ್ಯತೆ.
(ಪ್ರಜಾವಾಣಿ ದಿನಪತ್ರಿಕೆಯ ಮೆಟ್ರೊ ಪುರವಣಿಯಲ್ಲಿ ಗುರುವಾರ, ಆಗಸ್ಟ್ 29, 2013 ರಂದು ಪ್ರಕಟವಾದ ಲೇಖನ)

No comments:
Post a Comment