Monday, May 5, 2014

ಖಾಲಿ ಉಳಿದ 1.1 ಕೋಟಿ ಮನೆ!

 
ಒಂದೆಡೆ ಕೋಟಿಗಟ್ಟಲೆ ಜನರು ತಲೆ ಮೇಲೊಂದು ಸೂರಿಲ್ಲದೆ ಪರಿತಪಿಸು ತ್ತಿರುವಾಗಲೇ, ಇನ್ನೊಂದೆಡೆ ಕೋಟಿ ಗಟ್ಟಲೆ ಹೂಡಿ ನಿರ್ಮಿಸಿಟ್ಟಿರುವ ಕೋಟಿಗಟ್ಟಲೆ ಮನೆಗಳು ಕೊಳ್ಳುವವ ರಿಲ್ಲದೆ ಖಾಲಿ ಬಿದ್ದಿರುವ ವೈರುಧ್ಯದ ವಿಧ್ಯಮಾನವು ದೇಶದ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಹಿಡಿದ ಕೈಗನ್ನಡಿಯಂತಿದೆ.
ದೇಶದಲ್ಲಿ ಸುಮಾರು 2.5 ಕೋಟಿ ಮನೆಗಳ ಕೊರತೆಯ ಮಧ್ಯೆಯೇ, 1.10 ಕೋಟಿ ಮನೆಗಳು ಮಾರಾಟವಾಗದೆ ಖಾಲಿ ಉಳಿದಿವೆ. ಇತ್ತೀಚಿನ ಅಂಕಿ ಅಂಶಗಳ ಪ್ರಕಾರ ಖಾಲಿ ಉಳಿದಿರುವ ಒಟ್ಟು ಮನೆಗಳ ಪೈಕಿ ಶೇ 10ರಷ್ಟು ಮನೆಗಳು ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿವೆ ಎನ್ನುತ್ತಾರೆ ನಗರಾ ಭಿವೃದ್ಧಿ ಕಾರ್ಯದರ್ಶಿ ಸುಧೀರ್ ಕೃಷ್ಣನ್ ಅವರು.
ಇತ್ತೀಚೆಗೆ ರಾಯಲ್ ಇನ್‌ಸ್ಟಿಟ್ಯೂಷನ್ ಆಫ್ ಚಾರ್ಟಡ್ ಸರ್ವೆಯರ್ (ಆರ್‌ಐಸಿಎಸ್) ಸಂಸ್ಥೆ ‘ರಿಯಲ್ ಎಸ್ಟೇಟ್ ಸಮಾವೇಶ’ ಆಯೋಜಿಸಿತ್ತು. ಅಲ್ಲಿ ಈ ವಿಚಾರವಾಗಿ ಮಾತನಾಡಿದ ಸುಧೀರ್‌, ವಸತಿ ಪೂರೈಕೆ ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರವು ಬಾಡಿಗೆ ಕಾನೂನನ್ನು ಪರಿಷ್ಕರಿಸಲಿದೆ ಎಂದು ಹೇಳಿದ್ದರು.
ಸರ್ಕಾರಿ ಸಂಸ್ಥೆಗಳು ಅಥವಾ ಖಾಸಗಿ ರಿಯಲ್‌ ಎಸ್ಟೇಟ್‌ ಅಭಿವೃದ್ಧಿದಾರರು ನಿರ್ಮಿಸುವ ವಸತಿ ಯೋಜನೆಗಳನ್ನು ನಿರ್ವಹಣೆಗಾಗಿ ಸ್ಥಳೀಯ ಪೌರಸಂಸ್ಥೆಗಳಿಗೆ ವಹಿಸಿ ಕೊಡಬೇಕು ಎಂಬುದು ಅವರ ಅಭಿಮತ.
‘ಒಂದು ಅಂದಾಜಿನ ಪ್ರಕಾರ ನಾವು 2.5 ಕೋಟಿ ಮನೆಗಳ ಕೊರತೆಯನ್ನು ಎದುರಿಸುತ್ತಿದ್ದೇವೆ. 2011ರ ಅಂಕಿ ಅಂಶಗಳ ಪ್ರಕಾರವೇ ದೇಶದ ವಿವಿಧೆಡೆ 1.1 ಕೋಟಿ ಮನೆಗಳು ಮಾರಾಟ ವಾಗದೇ ಹಾಗೆ ಖಾಲಿ ಉಳಿದಿವೆ’.
ಇದು ಸುಧೀರ್ ಅವರು ಬಹಿರಂಗ ಪಡಿಸಿದ ದೇಶದ ರಿಯಲ್‌ ಎಸ್ಟೇಟ್‌ ಕ್ಷೇತ್ರದಲ್ಲಿನ ಸದ್ಯದ ವಾಸ್ತವ ಪರಿಸ್ಥಿತಿ. ಖಾಲಿ ಉಳಿದಿರುವ ಒಟ್ಟು ವಸತಿ ಸಂಕೀಣರ್ಗಳ ಪೈಕಿ ಶೇ 10ರಷ್ಟು ಮನೆಗಳು ದೆಹಲಿಗೆ ಹೊಂದಿಕೊಂಡಂತೆ ಇರುವ ‘ರಾಷ್ಟ್ರೀಯ ರಾಜಧಾನಿ ಪ್ರದೇಶ’ದಲ್ಲಿಯೇ (ಎನ್‌ಸಿಆರ್‌) ಇವೆ ಎನ್ನುವುದರತ್ತಲೂ ಅವರು ಗಮನ ಸೆಳೆಯುತ್ತಾರೆ.
12ನೇ ಪಂಚವಾರ್ಷಿಕ ಯೋಜನೆಯ (2012-ರಿಂದ 2017ವರೆಗಿನ ಅವಧಿಯ) ಆರಂಭದಲ್ಲಿ ದೇಶದಲ್ಲಿ ಜನರಿಗೆ ಸುಮಾರು  1.88 ಕೋಟಿ ಮನೆಗಳ ಕೊರತೆ ಇತ್ತು ಎಂದು ಕೇಂದ್ರ ಸರ್ಕಾರ ಲೆಕ್ಕ ಹಾಕಿದೆ. ಈ ಕೊರತೆಯಲ್ಲಿ ಶೇ 90ಕ್ಕೂ ಅಧಿಕ ಪಾಲು ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗ ಮತ್ತು ಕಡಿಮೆ ಆದಾಯವುಳ್ಳ ವರ್ಗಕ್ಕೆ ಸೇರಿದೆ.
ಶೇ 70ರಷ್ಟು ಜನರು ನಗರ ಪ್ರದೇಶದಲ್ಲಿಯೇ ಬದುಕಬೇಕಾಗಿದೆ ಎನ್ನುವ ಅವರು  ನಿಧಾನಗತಿಯ ನಗರೀಕರಣ ಕುರಿತಂತೆ ತಮ್ಮ ಕಳವಳ ವ್ಯಕ್ತಪಡಿಸುತ್ತಾರೆ.
ಈಗಾಗಲೇ ಶೇ 31ರ ಮಟ್ಟದಲ್ಲಿ ಆಗುತ್ತಿರುವ ನಗರೀಕರಣ ನಮಗೆ ಯಾವುದಕ್ಕೂ ಸಾಲದು. ಇದೊಂದು ಗಂಭೀರವಾದ ವಿಷಯವಾಗಿದೆ ಎನ್ನುತ್ತಾರೆ.
ನಿಧಾನಗತಿಯ ನಗರೀಕರಣವು ಗ್ರಾಮೀಣ ಭಾಗದ ಭೂಮಿಯ ಮೇಲೆ ಭಾರಿ ಪ್ರಮಾಣದಲ್ಲಿ ಅತಿಕ್ರಮಣ ನಡೆಸುತ್ತಿದೆ. ಇದರ ಪರಿಣಾಮವಾಗಿ ಭೂ ಹಿಡುವಳಿಗಳು ವಿಘಟನೆಯಾಗುತ್ತ  ರೈತರಿಗೆ ಅನಾನುಕೂಲತೆ ಉಂಟಾಗುತ್ತಿದೆ. ಸದ್ಯದ ಪರಿಸ್ಥಿತಿಯು ರಿಯಲ್ ಎಸ್ಟೇಟ್ ಹೂಡಿಕೆದಾರರಿಗೆ ತುಂಬಾ ಉತೇಜನಕಾರಿಯಾಗಿದೆ.
ಬಡವರ್ಗದ ಜನತೆಗೆ ಮನೆ ಒದಗಿಸಿಕೊಡುವುದಾಗಿ ಸರ್ಕಾರವೇನೊ ಭಾರಿ ಭರವಸೆ ನೀಡಿದೆ. ಆದರೆ ಸದ್ಯ ಖಾಲಿ ಉಳಿದಿರುವ ಮನೆಗಳನ್ನು ಅರ್ಹ ಫಲಾನುಭವಿಗಳು ಪಡೆದುಕೊಳ್ಳಲು ಸಾಧ್ಯವಾಗದು ಎನ್ನುವ  ಬೇಸರವೂ ಸುಧೀರ್ ಅವರದ್ದಾಗಿದೆ.
(ಪ್ರಜಾವಾಣಿ ದಿನಪತ್ರಿಕೆ ವಾಣಿಜ್ಯ ಪುರವಣಿಯಲ್ಲಿ ಬುಧವಾರ, ಏಪ್ರಿಲ್ 16, 2014 ರಂದು ಪ್ರಕಟವಾದ ಲೇಖನ)

No comments:

Post a Comment